Keblinger

Keblinger
| Friday, March 4, 2011

ನಾಗಾಭರಣ ನಿರ್ದೇಶನದಲ್ಲಿ ಗಾನಯೋಗಿ ಜೀವನ ಚರಿತ್ರೆ


ಸಂಗೀತ ಪ್ರಧಾನ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ. ಒಂದು ವರ್ಗದ ಪ್ರೇಕ್ಷಕರು ಆ ಚಿತ್ರಗಳನ್ನು ಆಸ್ವಾದಿಸಿದ್ದಾರೆ. ಈಗ ಮತ್ತೊಂದು ಸಂಗೀತ ಪ್ರಧಾನ ಚಿತ್ರ ಕನ್ನಡ ಬೆಳ್ಳಿತೆರೆ ಬೆಳಗಲು ಸಿದ್ಧತೆ ನಡೆಸುತ್ತಿದೆ. ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ 'ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ' (3 March 1914 – 17 September 2010) ಅವರ ಜೀವನ ಚರಿತ್ರೆ ಮೂಡಿಬರಲಿದೆ.
ಈ ಹಿಂದೆ ಪುಟ್ಟರಾಜ ಗವಾಯಿ ಅವರ ಗುರು ಗಾನಯೋಗಿ ಪಂಚಾಕ್ಷರಿ ಗವಾಯಿ ಜೀವನ ಚರಿತ್ರೆ ಕುರಿತ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದ್ದರು. ಲೋಕೇಶ್ ಮತ್ತು ಗಿರೀಶ್ ಕಾರ್ನಾಡ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಂಸಲೇಖ ಅವರ ಸಂಗೀತ ಸಂಯೋಜನೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯನ ಚಿತ್ರಕ್ಕಿತ್ತು.
ಈ ಚಿತ್ರವನ್ನು ಮಾರುತಿ ಜೆಡಿಯವರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ಧರ್ಮದೇವತೆ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಒಂಭತ್ತನೇ ಚಿತ್ರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ. ಗವಾಯಿ ಅವರ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ.
ಈ ಚಿತ್ರದ ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. ಅಂದಹಾಗೆ ನಿರ್ಮಾಪಕ ಮಾರುತಿ ಅವರು ಗವಾಯಿಗಳ ಸ್ವಸ್ಥಳ ಗದುಗಿನವರು. ಹಾಗಾಗಿ ಈ ಚಿತ್ರವನ್ನು ಇವರು ತುಂಬ ಮುತುವರ್ಜಿಯಿಂದ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಸಂಗೀತದಲ್ಲಿ ಮೂಡಿಬರುತ್ತಿರುವುದು ಈ ಚಿತ್ರದ ವಿಶೇಷ. ಗವಾಯಿಗಳ ಅಪಾರ ಶಿಷ್ಯವೃಂದಕ್ಕೆ ಈ ಚಿತ್ರ ಸ್ಫೂರ್ತಿಯಾಗಲಿದೆ.
 

Copyright © 2010 ಸಿನಿಮಾ ಲೋಕ